Sunday, 26 May 2024

ಆಧ್ಯಾತ್ಮದತ್ತ ಪಯಣ..


 

ಸರ್, ಆಧ್ಯಾತ್ಮದ ಕುರಿತಾದ ನಿಮ್ಮ ಲೇಖನಗಳು ತುಂಬಾ ಸರಳವಾಗಿರುತ್ತದೆ, ನಮ್ಮಂತಹ ಪಾಮರರಿಗೂ ಅರ್ಥವಾಗುವಂತೇ ಬರೆಯುತ್ತಿದ್ದೀರಿ ಎಂದು ಪ್ರತಿಕ್ರಿಯೆಗಳು ಬರುತ್ತಿವೆ. ನಿಜವಾಗಿಯೂ ಬಹಳ ಸಂತಸದ ವಿಷಯ. ಆಧ್ಯಾತ್ಮವೆಂದರೆ ಅರ್ಥವಾಗದಷ್ಟು ಕಬ್ಬಿಣದ ಕಡಲೆಯಲ್ಲ. ಆಧ್ಯಾತ್ಮದತ್ತ ಸಾಗಲು ಪಂಡಿತ, ಪಾಮರರೆಂಬ ಬೇಧವೂ ಇಲ್ಲ. ಆಧ್ಯಾತ್ಮವೆಂದರೆ  ನಮ್ಮನ್ನು ನಾವು ಅರಿತುಕೊಳ್ಳುವ ಪ್ರಯತ್ನವಷ್ಟೇ..!! ಯಾವಾಗ ನಮ್ಮನ್ನು ನಾವು ಅರಿತುಕೊಳ್ಳಲು ಯತ್ನಿಸುತ್ತೇವೆ, ಅಲ್ಲಿಂದಲೇ ನಮ್ಮ ಆಧ್ಯಾತ್ಮ ಪಯಣ ಶುರುವಾಗುತ್ತದೆ. ಬದುಕಿನಲ್ಲಿ ಒಂದು ಹೊಸ ಅಧ್ಯಾಯ ತೆರೆಯುತ್ತದೆ. ನಾನು, ನನ್ನದೆಂಬ ಅಜ್ಞಾನ ಕ್ಷೀಣಿಸುತ್ತದೆ. ಮನಸ್ಸು ವಿಶಾಲ ಪ್ರಪಂಚದತ್ತ ಹೊರಳುತ್ತದೆ. ಪ್ರಪಂಚ ಬಹಳ ಸುಂದರವಾಗಿ ಕಾಣಿಸುತ್ತದೆ.

ಹಾಗಾಗಲು ನಮ್ಮ ಸುತ್ತಲಿರುವ ಭ್ರಮಾಪ್ರಪಂಚದಿಂದ ಹೊರಬರಬೇಕು. ಕಣ್ಣಿಗೆ ಕಾಣಿಸುತ್ತಿರುವ ಎಲ್ಲ ವಸ್ತುಗಳೂ ಒಂದು ಮಾಯೆ. ಆ ಮಾಯೆಯೊಳಗೆ ಬಂಧಿತರಾಗಿರುವ ನಾವು ಭ್ರಮೆಯ ಪ್ರಪಂಚದಲ್ಲೇ ಬದುಕುತ್ತಿದ್ದೇವೆ. ಯಾರು ಭ್ರಮಾಪ್ರಪಂಚದಿಂದ ಹೊರಬರುತ್ತಾರೋ ಅವರಿಗೆ ಸುಂದರ ಪ್ರಪಂಚದ ಅರಿವಾಗುತ್ತದೆ. ಆ ಭ್ರಮೆಯಿಂದ ಹೊರಬರುವುದಾದರೂ ಹೇಗೆ..? ಗೀತೆಯಲ್ಲಿ ಭಗವಂತನೇ ಪರಿಹಾರ ತಿಳಿಸಿದ್ದಾನೆ “ ಮಯ್ಯೇವ ಮನ ಆಧತ್ಸ್ವ, ಮಯಿ ಬುದ್ಧಿಂ ನಿವೇಶಯ, ನಿವಸಿಷ್ಯಸಿ ಮಯ್ಯೇವ ಅತ ಊರ್ಧ್ವಂ ನ ಸಂಶಯಃ” ಭ್ರಮೆಯ ಪ್ರಪಂಚದಿಂದ ಹೊರಬರಬೇಕೆಂದರೆ, ನಮ್ಮ ಮನಸ್ಸು ಹಾಗೂ ಬುದ್ಧಿ ಭಗವಂತನಲ್ಲಿ ಲೀನವಾಗಬೇಕು. ಆಗ ನಾವು ಭಗವಂತನ ಅಸ್ತಿತ್ವವನ್ನು ಅರಿಯಬಹುದು.

ಮನಸ್ಸು ಹಾಗೂ ಬುದ್ಧಿಯನ್ನು ಭಗವಂತನಲ್ಲಿ ಲೀನಗೊಳಿಸುವುದಾದರೂ ಹೇಗೆ..? ಆಧುನಿಕತೆಯ ಬದುಕಿನಲ್ಲಿ ನಮ್ಮ ಮನಸ್ಸು ಸಂಪಾದನೆಯಲ್ಲಿದೆ, ಬುದ್ಧಿ ಚಪಲವಾಗಿದೆ. ಅವುಗಳನ್ನು ಪರಮಾತ್ಮನಲ್ಲಿ ಹೇಗೆ ವಿಲೀನಗೊಳಿಸುವುದು..? ಬದುಕಿಗೆ ಆಸರೆಯಾಗಿರುವ ಸಂಪಾದನೆಯನ್ನು ಬಿಟ್ಟು ಆಶ್ರಮ ಸೇರುವುದೇ..? ಅದೂ ಕೂಡ ಸರಿಯಾದ ಮಾರ್ಗವಲ್ಲ. “ಕುರು ಕರ್ಮೈವ ತಸ್ಮಾತ್ವಂ” ಕರ್ಮದಿಂದ ವಿಮುಖನಾಗುವುದು ಸಹ ಶ್ರೇಯಸ್ಸಲ್ಲ. ಆದರೆ ಕರ್ಮವನ್ನು ಮಾಡುತ್ತಲೇ ಮನಸ್ಸನ್ನು ಪರಮಾತ್ಮನಲ್ಲಿ ಲೀನಗೊಳಿಸಬೇಕು.

ಆಕಾಶದಿಂದ ಎಷ್ಟೇ ಮಳೆ ಸುರಿಯಲಿ, ಅದರ ಒಂದು ಹನಿಯೂ ಕಮಲಪತ್ರಕ್ಕೆ ಅಂಟುವುದಿಲ್ಲ. ನಮ್ಮ ಸ್ಥಿತಿಯೂ ಹಾಗಿರಬೇಕು..!! ಕರ್ಮ ನಮ್ಮದು ಕರ್ಮಫಲ ಪರಮಾತ್ಮನದ್ದು ಎಂಬ ಭಾವನೆ ನಮ್ಮಲ್ಲಿರಬೇಕು. ಲಾಭ-ನಷ್ಟ, ಜಯ-ಸೋಲು ಯಾವುದಕ್ಕೂ ಅಂಟಿಕೊಂಡಿರಬಾರದು. ಸುಖ, ದುಃಖಗಳನ್ನು ಸಮಭಾವದಿಂದ ಸ್ವೀಕರಿಸಬೇಕು. “ದೇವನೊಬ್ಬನಿರುವ ಅವನೆಲ್ಲ ನೋಡುತಿರುವ’ ಎಂದು ಎಲ್ಲ ಆಗುಹೋಗುಗಳನ್ನು ಆತನಿಗೆ ಅರ್ಪಿಸಬೇಕು. ಸಾಧು-ಸಂತರ ಜೊತೆ ಗೆಳೆತನ ಬೆಳೆಸಬೇಕು. ಶ್ರೀ ಶಂಕರ ಭಗವತ್ಪಾದರು ಹೇಳಿದಂತೇ,

ಸತ್ಸಂಗತ್ವೇ ನಿಸ್ಸಂಗತ್ವಂ
ನಿಸ್ಸಂಗತ್ವೇ ನಿರ್ಮೋಹತ್ವಮ್|
ನಿರ್ಮೋಹತ್ವೇ ನಿಶ್ಚಲತತ್ತ್ವಂ
ನಿಶ್ಚಲತತ್ತ್ವೇ ಜೀವನ್ಮುಕ್ತಿಃ ||

ಸಜ್ಜನರ ಸಂಪರ್ಕದಲ್ಲಿದ್ದರೆ ಧನಾದಿ ವಿಷಯಗಳ ಚಿಂತೆ ತಪ್ಪುತ್ತದೆ.
 ಚಿಂತೆ ಹೋದಾಗ ಅವುಗಳ ಮೋಹವೂ ಹೋಗುತ್ತದೆ.
ಅಜ್ಞಾನದಿಂದಾದ ಮೋಹವು ಹೋದರೆ ಶಾಶ್ವತವಾದ ಸತ್ಯವೇನೆಂಬುದರ ಜ್ಞಾನವಾಗುತ್ತದೆ.
ಅಂತಹ ಜ್ಞಾನ ಉದಿಸಿದರೆ ಜೀವನ್ಮುಕ್ತಿಯೇ
ಪ್ರಾಪ್ತಿಯಾಗುತ್ತದೆ.

ಯಾವಾಗ ಮನಸ್ಸು ಹಾಗೂ ಬುದ್ಧಿ ಸ್ಥಿರವಾಗುತ್ತದೆಯೋ ಮನಸ್ಸಿನಲ್ಲಿ ಏಕಾಗ್ರತೆ ಮೂಡುತ್ತದೆ, ಏಕಾಗ್ರತೆಯಿಂದ ಮನಸ್ಸಿನ ಚಾಂಚಲ್ಯ ದೂರವಾಗುತ್ತದೆ. ಮನೋಚಾಂಚಲ್ಯ ದೂರವಾದಾಗ ಶಾಂತಿ ಲಭಿಸುತ್ತದೆ. ಶಾಂತಿಯಿಂದ ಭಕ್ತಿ ಸಾಧ್ಯವಾಗುತ್ತದೆ. ಭಕ್ತಿಯಿಂದ ಪರಮಾತ್ಮನ ಅಸ್ತಿತ್ವದ ಅರಿವಾಗುತ್ತದೆ. ಪರಮಾತ್ಮನ ಅಸ್ತಿತ್ವ ಅರಿವಾದಾಗ ಮನಸ್ಸು ಆಧ್ಯಾತ್ಮದತ್ತ ಸಾಗುತ್ತದೆ. ಆಧ್ಯಾತ್ಮದಿಂದ ಕಾಮ,ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ವರ್ಗಗಳ ನಿವಾರಣೆಯಾಗುತ್ತದೆ.

 

“ಲೋಕಾಃ ಸಮಸ್ತಾಃ ಸುಖಿನೋ ಭವಂತು”

Thursday, 16 May 2024

ಮಾನವ ಜನ್ಮ ದೊಡ್ಡದು...

ಬದುಕಿನ ಕೆಲವು ಕಟು ಸತ್ಯಗಳನ್ನು ಮರೆತು ವರ್ತಮಾನದ ಕ್ಷಣಗಳನ್ನು ಅನುಭವಿಸುತ್ತೇವೆ. ಆದರೆ ವರ್ತಮಾನದ ನೆನಪಲ್ಲಿ ಭವಿಷ್ಯವನ್ನು, ಬದುಕಿನ ಉದ್ದೇಶವನ್ನು ಮರೆಯುವುದು ಮೂರ್ಖತನ. “ಜಂತೂನಾಂ ನರಜನ್ಮ ದುರ್ಲಭಮ್” ನಮ್ಮ ನಂಬಿಕೆಯ ಪ್ರಕಾರ ಹಲವಾರು ಜನ್ಮಗಳ ಪುಣ್ಯದ ಫಲದಿಂದ ಈ ಮನುಷ್ಯ ಜನ್ಮ ಸಿಕ್ಕಿದೆ. ಮನುಷ್ಯ ಜನ್ಮದ ಉದ್ದೇಶ ಕೇವಲ ಮಜಾ, ಮಸ್ತಿ ಆಗಿರಬಾರದು. “ಮಾನವ ಜನ್ಮ ದೊಡ್ಡದು ಅದ ಹಾಳ ಮಾಡಿಕೊಳ್ಳದಿರಿ ಹುಚ್ಚಪ್ಪಗಳಿರಾ” ಎಂಬ ದಾಸವಾಣಿ ಪ್ರಸ್ತುತ. ಆಹಾರ, ನಿದ್ರೆ, ಭಯ, ಮೈಥುನಗಳಲ್ಲಿ ಮನುಷ್ಯ ಎಲ್ಲಾ ಪ್ರಾಣಿಗಳಿಗೂ ಸರಿಸಮಾನ. ಆದರೆ ಮನುಷ್ಯ ಎಲ್ಲ ಪ್ರಾಣಿಗಳಿಗಿಂತಲೂ ಶ್ರೇಷ್ಟ . ಏಕೆಂದರೆ “ಜ್ಞಾನಂ ತು ತೇಷಾಮಧಿಕೋ ವಿಶೇಷಃ” ಮನುಷ್ಯನಲ್ಲಿರುವ ಜ್ಞಾನಶಕ್ತಿಯಿಂದ ಆತ ಎಲ್ಲಾ ಪ್ರಾಣಿಗಳಿಗಿಂತಲೂ ಮಿಗಿಲು. ಆದರೆ ಆ ಜ್ಞಾನ ಶಕ್ತಿಯನ್ನು ಮರೆತು ಮನುಷ್ಯ ಮೃಗಗಳಂತೇ ಆಹಾರ, ನಿದ್ರೆ, ಭಯ, ಮೈಥುನದಲ್ಲೇ ವ್ಯಸ್ತನಾದರೆ, ಮನುಷ್ಯ ಜನ್ಮಕ್ಕೇನು ಫಲ...?

ವರ್ತಮಾನದ ಪರಿಸ್ಥಿತಿ ಹೀಗೆ ಸಾಗುತ್ತಿದೆ. ಹುಟ್ಟಿದ ಮಗುವಿಗೆ ಸಂಸ್ಕಾರ ಕಲಿಸಲು, ಮಗುವಿನ ಜೊತೆ ಸಮಯ ಕಳೆಯಲು ಪೋಷಕರಿಗೆ ಪುರುಸೊತ್ತಿಲ್ಲ. “ವರ್ಕಿಂಗ್ ಪೇರೆಂಟ್” ಎಂಬ ಹಣೆಬರಹ. ಮಗುವಿನ ಜೊತೆ ಸಮಯ ಕಳೆಯಲಾರದ ಪೋಷಕರಿಗೆ ಜೀವನದಲ್ಲಿ ಹಣ ಮಾಡುವ ಚಪಲ. ಅಂಬೆಗಾಲಿಕ್ಕುವ ಮೊದಲೇ ಮಗುವನ್ನು ಡೇ ಕೇರಿಗೆ ಸೇರುಸುವ ತರಾತುರಿ. ಅಲ್ಲಿಗೆ ಮಕ್ಕಳಿಗೆ ಸಿಗುವ ಪೋಷಕರ ಪ್ರೀತಿ, ಮಕ್ಕಳ ಅಮೂಲ್ಯ ಬಾಲ್ಯಜೀವನ ಖತಮ್..!! ಮಹಾಭಾರತ, ರಾಮಾಯಣ, ಪಂಚತಂತ್ರದ ಬದಲು “ಜಾನಿ ಜಾನಿ ಯೆಸ್ ಪಾಪಾ” ಶುರು..! ಎಲ್ಲವನ್ನೂ ಮಾಡುವುದು ಮಕ್ಕಳಿಗಾಗಿ, ಹೋಗುವಾಗ ಗಂಟು ತೆಗೆದುಕೊಂಡು ಹೋಗುತ್ತೇವಾ ? ಎಂಬ ಭಾಷಣ ಬೇರೆ. ಅಲ್ಲ, ಮಕ್ಕಳೇನು ಗಂಟು ಮಾಡಿಡಿ ಎಂದು ಕೇಳಿದ್ದವಾ..? ಅವರ ಅಮೂಲ್ಯ ಬಾಲ್ಯದ ಕ್ಷಣಗಳನ್ನೇ ಹಾಳು ಮಾಡಿದ ಮೇಲೆ ಯಾವ ಗಂಟಿಗೇನು ಫಲ...?

ಸ್ವಲ್ಪ ಸಮಯದ ನಂತರ ಯಾವ ಸ್ಕೂಲ್ ಎಂಬ ಹುಡುಕಾಟ. ಗೂಗಲ್ಲಿನಲ್ಲಿ ೫ ಸ್ಟಾರ್ ಇರುವ, ಇಂಗ್ಲೀಷ್ ಮೀಡಿಯಮ್ ಸ್ಕೂಲೇ ಆಗಬೇಕು. ಅಲ್ಲೇನು ಭಾರತೀಯ ಸಂಸ್ಕೃತಿ ಲೆಕ್ಕಾಚಾರಕ್ಕಿಲ್ಲ ಆಧುನಿಕತೆಯ ಶಿಕ್ಷಣ. ಮಾತೆತ್ತಿದರೆ ಇಂಗ್ಲೀಷಿನಲ್ಲಿ ಟುಸ್ ಪುಸ್..! ಭಾರತೀಯ ಸಂಸ್ಕೃತಿಯ ಶಿಕ್ಷಣವಿಲ್ಲ, ಸಂಸ್ಕೃತವಿಲ್ಲ, ಯೋಗ, ಶಾಸ್ತ್ರಗಳಿಲ್ಲ. ಶಿಕ್ಷಣದ ಉದ್ದೇಶ ಒಂದೇ, ದೊಡ್ಡ ನೌಕರಿಗೆ ಹೋಗುವುದು, ಹಣ ಸಂಪಾದಿಸುವುದು, ಐಷಾರಾಮಿ ಜೀವನ ಸಾಗಿಸುವುದು..!!

ಅಂತೂ ನೌಕರಿಗೂ ಸೇರಾಯಿತು, ಇಲ್ಲಾದರೂ ಮಾನವ ಜೀವನದ ಲಕ್ಷ್ಯ ನೆನಪಿಗೆ ಬಂದೀತೆ...? ಖಂಡಿತ ಇಲ್ಲ. ಟಾರ್ಗೆಟ್ಟುಗಳು, ಮೀಟಿಂಗುಗಳು, ಪ್ರಮೋಷನ್ನುಗಳು, ಅದೂ ಬೇರೆಯದೇ ಲೋಕ..!! ಆಧುನಿಕ ಜೀವನದಲ್ಲಿ ಬಾಲ್ಯ ಹಾಳಾಯಿತು, ಶಿಕ್ಷಣ ಹಳಿ ತಪ್ಪಿತು, ಯೌವನ ಬರಿದಾಯಿತು. ಇನ್ನೇನು ಎಲ್ಲವೂ ಮುಗಿಯಿತು ಎನ್ನುವದರಲ್ಲಿ ಹಲವರಿಗೆ “ಜೀವನದಲ್ಲಿ ಎನೋ ಮಿಸ್ಸಾಗಿದೆ” ಎಂಬ ಅರಿವಾಗುತ್ತದೆ. ಅದರ ಅನ್ವೇಷಣೆ ನಡೆಯುತ್ತದೆ..! ಅಲ್ಲಿಗೆ ಜೀವನದ ಮುಕ್ಕಾಲು ಪರ್ಸೆಂಟ್ ಆಯುಷ್ಯ ಬರಿದಾಗಿರುತ್ತದೆ.

ಜೀವನವೆಂದರೆ ಕೇವಲ ಹಣ ಮಾಡುವುದಲ್ಲ. ನಮ್ಮನ್ನು ನಾವು ಅರಿಯುವ ಪ್ರಯತ್ನ. ಅಜ್ಞಾನದಿಂದ ಬೆಳಕಿನ ಕಡೆ ಸಾಗುವ ಪ್ರಯತ್ನ. ನಮ್ಮಲ್ಲಿರುವ “ನಾನು” ಎಂಬ ಅದಮ್ಯ ಭಾವನೆಯಿಂದ “ನನ್ನದೇನೂ ಇಲ್ಲ” ಎಂಬುದರ ಕಡೆ ಸಾಗುವ ಪ್ರಯತ್ನ. ಆತ್ಮತತ್ವಜ್ಞಾನವನ್ನು ಅರಿಯುವ ಪ್ರಯತ್ನ. ಈ ಯಾವ ಪ್ರಯತ್ನಗಳನ್ನೂ ಸಾಧಿಸದೇ ಕೇವಲ ಸಂಸಾರ ತಾಪತ್ರಯದಲ್ಲೇ ಮುಳುಗಿದರೆ ಬದುಕಿನ ಉದ್ದೇಶ ಹೇಗೆ ನೆರವೇರಬಹುದು..?

“ವೃದ್ಧೋ ಯಾತಿ ಗೃಹೀತ್ವಾ ದಂಡಂ ತದಪಿ ನ ಮುಂಚತ್ಯಾಶಾ ಪಿಂಡಮ್” ವಯಸ್ಸಾಗಿ ಕೋಲು ಹಿಡಿದು ನಡೆಯುತ್ತಿದ್ದರೂ ಆಸೆಯೆಂಬ ಪಿಂಡ ಮನುಷ್ಯನನ್ನು ಬಿಡುವುದಿಲ್ಲವಂತೆ. ಅದಕ್ಕೆ ಅನೇಕ ರಾಜಕಾರಣಿಗಳು ಸಾಕ್ಷಿ. ಕರ್ತವ್ಯ ಕರ್ಮಗಳನ್ನು ಮರೆಯಬಾರದೆಂದು ಭಗವಂತನೇ ಗೀತೆಯಲ್ಲಿ ಹೇಳಿದ್ದಾನೆ. ಆದರೆ ಕರ್ಮಗಳನ್ನೇ ಸದಾ ಕರ್ತವ್ಯಗಳನ್ನಾಗಿ ಮಾಡಿಕೊಂಡರೆ, ವೈರಾಗ್ಯ ಬರುವುದು ಯಾವಾಗ ? ಹಿಂದಿನ ಕಾಲದಲ್ಲಿ ಮಕ್ಕಳನ್ನು ಅಧಿಕಾರಕ್ಕೆ ನಿಯೋಜಿಸಿ ವಯಸ್ಸಾದ ರಾಜರು ವಾನಪ್ರಸ್ಥಾಶ್ರಮಕ್ಕೆ ತೆರಳುತ್ತಿದ್ದರು. ಈಗಿನವರಲ್ಲಿ ವಯಸ್ಸಾದರೂ ಅಧಿಕಾರದ ವ್ಯಾಮೋಹ ಕಡಿಮೆಯಗುತ್ತಿಲ್ಲವಲ್ಲ, ಕಲಿಯುಗದ ಪ್ರಭಾವವೂ ಇರಬಹುದು. 

ಆಧುನಿಕತೆಯ ಹೆಸರಲ್ಲಿ ಜೀವನದ ಉದ್ದೇಶ ಮರೆಯುವುದು ಮೂರ್ಖತನ. ಬದುಕೆಂದರೆ ಸುದೀರ್ಘವಲ್ಲ, ನಾಳೆಯ ಭರವಸೆಯಿಲ್ಲ. ನಾನು, ನನ್ನದು ಎಂದು ಮೆರೆದ ಅದೆಷ್ಟೋ ಜನ ಕಾಲದ ಹೊಡೆತಕ್ಕೆ ಮಣ್ಣಾಗಿ ಹೇಳ ಹೆಸರಿಲ್ಲದೇ ಹೋದರು. ಆಸೆಯ ಮತ್ತು ಹೆಚ್ಚಾದರೆ, ಸ್ಮಶಾನಕ್ಕೆ ಸಾಗುವ ಹೆಣಗಳನ್ನೊಮ್ಮೆ ನೋಡಬೇಕು. ಭವಿಷ್ಯದಲ್ಲಿ ನನ್ನ ಪರಿಸ್ಥಿತಿಯೂ ಅದೇ ಎಂದು ನೆನಪಿಟ್ಟುಕೊಳ್ಳಬೇಕು. ಈ ಪ್ರಪಂಚದಲ್ಲಿ ಎಲ್ಲವೂ ಅಸ್ಥಿರ ಎಂಬ ಭಾವನೆ ಮೂಡಬೇಕು. ಸದಾ ಭಗವಂತನ ನಾಮ ಸ್ಮರಣೆ, ಧರ್ಮಾಚರಣೆ ಮಾನವ ಜೀವನದ ಉದ್ದೇಶವೆಂದು ಅರಿಯಬೇಕು. “ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ” ಎಂಬ ನೀತಿ ಅನುಸರಿಸಬೇಕು. ಆಗಲೇ ಮನುಷ್ಯ ಜೀವನ, ಪ್ರಾಣಿಗಳ ಜೀವನಕ್ಕಿಂತಲೂ ವಿಭಿನ್ನವೆಂಬುದು ಸತ್ಯವಾದೀತು.


“ಲೋಕಾಃ ಸಮಸ್ತಾಃ ಸುಖಿನೋ ಭವಂತು”

 

Saturday, 6 April 2024

ಮನ ಏವ ಮನುಷ್ಯಾಣಾಮ್...

 ಬರೆಯಬೇಕೆಂಬ ಆಸೆ ಸಾವಿರದಷ್ಟಿದೆ, ಆದರೆ ಸಿಗುವ ಸಮಯ ಬಹಳ ಕಡಿಮೆ...!! ಆಗಾಗ ಫೇಸ್ಬುಕ್ ಕಡೆ ಬಂದು ನಾಲ್ಕಾರು ಲೈನ್ ಗೀಚುವುದೇ ಹೆಚ್ಚು. ಬರಹ ದೀರ್ಘವಾದರೆ ಓದುವವರಿಗೂ ತಾಳ್ಮೆಯಿಲ್ಲ. ಎಲ್ಲರದೂ ಧಾವಂತದ ಬದುಕು, ಟಾರ್ಗೆಟ್ಟು, ಡೆಡ್ ಲೈನುಗಳ ಮಧ್ಯದಲ್ಲಿ ಬದುಕಲು ಸಮಯವಿಲ್ಲದಾಗಿದೆ. ಜನರ ತಾಳ್ಮೆಯೂ ಕಡಿಮೆಯಾಗಿದೆ. ಜೀವನ ಒಂಥರಾ ರೀಲ್ಸ್ ರೀತಿಯಾಗಿದೆ..!! ಎಲ್ಲವೂ ಜಟ್ ಪಟ್ ಎಂದಾಗಬೇಕು, ಫಾಸ್ಟ್ ಫುಡ್ ತರ..!! 

ತೀರ ೨೦೦೦ ಇಸ್ವಿಯವರೆಗೂ ಕಾಲ ಈ ರೀತಿಯಿರಲಿಲ್ಲ. ಆಗಿನ್ನೂ ಮೊಬೈಲ್, ಇಂಟರ್ನೆಟ್ ಯುಗ ಜಸ್ಟ್ ಸ್ಟಾರ್ಟ್ ಆಗಿತ್ತು. ಆದರೆ ಜನರು ಅಡಿಕ್ಟ್ ಆಗಿರಲಿಲ್ಲ. ಮದುವೆ, ಮುಂಜಿ ಮುಂತಾದ ಸಮಾರಂಭಗಳಲ್ಲಿ ಮಾತಿಗೆ ಬರವಿರಲಿಲ್ಲ. ನಾಲ್ಕು ಜನ ಸೇರಿದರೆ ಆತ್ಮೀಯತೆ ಇರುತ್ತಿತ್ತು. ಕಷ್ಟ-ಸುಖಗಳ ವಿನಿಮಯವಿರುತ್ತಿತ್ತು, ಭಾವನೆ, ಸಂಬಂಧಗಳ ಹಂದರವಿತ್ತು. ಬಾಯಿಗೆ ಕೆಲಸವಿತ್ತು, ಬೆರಳುಗಳಿಗೆ ವಿಶ್ರಾಂತಿಯಿತ್ತು. ತಮ್ಮವರನ್ನು ಗುರುತಿಸುವ ಮುಗುಳ್ನಗೆಯಿತ್ತು. ಕಾರ್ಯಕ್ರಮಗಳಲ್ಲಿ ಹೆಂಗಳೆಯರು ಹಾಡುವ ಸುಂದರ ಧ್ವನಿಯಿತ್ತು. ಪುರೋಹಿತರ ಗಡುಸಾದ ಮಂತ್ರಘೋಷವಿತ್ತು. ಎಲ್ಲರಿಗೂ ಸಹನೆಯಿತ್ತು, ಸಂಬಂಧದ ಪರಿಕಲ್ಪನೆಯಿತ್ತು, ಹೇಗೆ ವರ್ತಿಸಬೇಕೆಂಬ ಪರಿಜ್ಞಾನವೂ ಇತ್ತು..!! ಫೋನ್ ಎಂದರೆ ಎಮರ್ಜೆನ್ಸಿ ಸ್ಥಿತಿಯಲ್ಲಿ ಮಾತನಾಡಲು ಬಳಸುವ ಮಾಧ್ಯಮ ಎಂಬುದಾಗಿತ್ತು. 

ಆಮೇಲೆ ಚಿತ್ರ-ವಿಚಿತ್ರ ಸ್ಮಾರ್ಟ್ ಫೋನುಗಳು ಬಂದವು. ನಗರಗಳಲ್ಲಷ್ಟೇ ಅಲ್ಲ, ಹಳ್ಳಿಹಳ್ಳಿಗಳಲ್ಲಿ ಇಂಟರ್ನೆಟ್ ಸೇವೆಗಳು ಆರಂಭವಾದವು. ಜನರ ಕೈಯ್ಯಲ್ಲಿದ್ದ ಸಾಮಾನ್ಯ ಫೋನುಗಳು ದೂರವಾಗಿ ಸ್ಮಾರ್ಟ್ ಫೋನುಗಳು ಬಂದವು. ಅದರಲ್ಲಿ ಫೇಸ್ಬುಕ್, ವಾಟ್ಸ್ ಆಪ್, ಇನ್ಸ್ಟಾಗ್ರಾಂ ಅಪ್ಲಿಕೇಶನ್ನುಗಳು ಡೌನ್ ಲೋಡ್ ಆದವು. ಯಾವ ಮಾಹಿತಿಯಿರಲಿ, ಮ್ಯೂಸಿಕ್ ಇರಲಿ, ಡಾನ್ಸ್ ಇರಲಿ ಬೆರಳ ತುದಿಯಲ್ಲಿ ಸಿಗಲಾರಂಭಿಸಿದವು. ಬ್ಯಾಂಕಿಂಗ್ ಕೆಲಸಗಳು ಸರಳವಾದವು, ಆನ್ಲೈನ್ ವಹಿವಾಟುಗಳು ಹೆಚ್ಚಾದವು, ಕೆಲವು ಸರ್ಕಾರಿ ಕೆಲಸಗಳಲ್ಲಿ ಪಾರದರ್ಶಕತೆಯೂ ಬಂತು. ಈ ಬದಲಾವಣೆ ಆಗದಿದ್ದರೆ ನಾವಿಂದು ಬಸ್ ಟಿಕೇಟುಗಳಿಗೆ, ರೈಲ್ವೇ ಟಿಕೇಟುಗಳಿಗೆ ನಾಲ್ಕಾರು ಘಂಟೆ ಲೈನಿನಲ್ಲಿ ನಿಲ್ಲಬೇಕಿತ್ತು,  ಆ ಅನುಭವವೂ ಆಗಿದೆ..!! ಸ್ಮಾರ್ಟ್ ಫೋನುಗಳು ಅದೆಷ್ಟೋ ಕೆಲಸಗಳನ್ನು ಹಗುರಾಗಿಸಿದವು, ಖಂಡಿತ ಒಪ್ಪಲೇಬೇಕು.  ಬದಲಾವಣೆ ಜಗದ ನಿಯಮ, ಆ ಬದಲಾವಣೆಯನ್ನು ಒಳ್ಳೆಯದನ್ನಾಗಿ ಪರಿವರ್ತಿಸಿಕೊಳ್ಳುವ ಜಾಣ್ಮೆಯೂ ನಮ್ಮಲ್ಲಿರಬೇಕು..!! 

ಆದರೆ ಮಂಗನಿಂದ ಮಾನವ ಎಂಬ ಡಾರ್ವಿನ್ನನ ವಿಕಾಸವಾದ ಉಲ್ಟಾ ಹೊಡೆದು ಮಾನವನಿಂದ ಮಂಗ ಎಂಬತ್ತ ಹೊರಟಿದ್ದು ದುರದೃಷ್ಟಕರ. ಸಾಮಾಜಿಕ ಜಾಲತಾಣಗಳು ಮಾಹಿತಿ ವಿನಿಮಯಕ್ಕಿಂದ ಜಾಸ್ತಿ ಕಪಿಚೇಷ್ಟೆಗೆ ಮರುಳಾಗಿವೆ. ಕೆಲವೊಂದು ಟ್ರೋಲುಗಳು, ರೀಲ್ಸ್ ಗಳು ಎಷ್ಟು ಅಸಹನೆ ಉಂಟು ಮಾಡುತ್ತವೆ ಎಂದರೆ ಸಾಮಾಜಿಕ ಜಾಲತಾಣಗಳಿಂದ ದೂರ ಓಡಿ ಹೋಗುವಷ್ಟು...!! ರೀಲ್ಸ್, ಟ್ರೋಲುಗಳು ಇಲ್ಲದ ಜೀವನ ಯುವಜನತೆಗೆ ಸಪ್ಪೆ ಎನಿಸಲಾರಂಭಿಸಿದೆ. “ಹತ್ತಿರವಿದ್ದು ದೂರ ನಿಲ್ಲುವೆವು ನಮ್ಮ ಮೊಬೈಲುಗಳ ಸ್ಕ್ರೀನಿನಲಿ” ಎಂಬ ಪರಿಸ್ಥಿತಿಯಿದೆ..! ಸ್ಕ್ರೀನುಗಳನ್ನು ನೋಡಿ ಕಣ್ಣಿನ ಕೆಳಬದಿ ಕಪ್ಪಾಗಿದೆ, ಬೆರಳುಗಳು ಸೊಟ್ಟಗಾಗಿವೆ. ಸಭೆ, ಸಮಾರಂಭಗಳು ಫಾರ್ಮಾಲಿಟಿ ಎನಿಸಿವೆ. ಸಂಬಂಧಿಕರು ಎದುರು ಬಂದರೆ ಒಂದು ಕೃತಕ ಮುಗುಳ್ನಗೆ, ಆಮೇಲೆ ಗಮನ ಮೊಬೈಲಿನತ್ತಲೇ ಸಾಗುತ್ತದೆ. ತಲೆಯಲ್ಲಿ ದಿನದ ಟ್ರೆಂಡ್ ಏನೆಂದು ಓಡುತ್ತಿರುತ್ತದೆ, ಕಾಮೆಂಟ್ ಯಾವಾಗ ಹಾಕೋಣ ಎನಿಸುತ್ತದೆ. ಸಮಾರಂಭಗಳಲ್ಲಿ ಮಾತಿನ ಬರವಾಗಿದೆ, ಆ ಬಾಲ ವೃದ್ಧರಾದಿಯಾಗಿ ಎಲ್ಲರ ಕೈಲೂ ಮೊಬೈಲ್ ರಿಂಗಣಿಸುತ್ತಿರುತ್ತದೆ, ರೀಲ್ಸುಗಳ ಕರ್ಕಶ ಧ್ವನಿಯಿರುತ್ತದೆ. ಪುರೋಹಿತರ ಮಂತ್ರ ರೀಲ್ಸುಗಳ ಅಬ್ಬರದಲ್ಲಿ ಕ್ಷೀಣವಾಗಿರುತ್ತದೆ..! ಮಾನವ ಸಂಬಂಧಗಳಿಗಿಂತ, ಮೊಬೈಲ್ ಸಂಬಂಧಗಳ ಬೆಲೆ ಜಾಸ್ತಿಯಾಗಿದೆ.

ಸಂಸ್ಕೃತದಲ್ಲಿ ಒಂದು ಮಾತಿದೆ, “ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ” ಎಂದು. ಅರ್ಥ – ಮನುಷ್ಯನ ಮನಸ್ಸೇ ಆತನ ಬಂಧನಕ್ಕೂ, ಮೋಕ್ಷಕ್ಕೂ ಕಾರಣವಾಗುತ್ತದೆ ಎಂಬುದಾಗಿ. ಮೊಬೈಲಿನ ಅತಿಯಾದ ಬಳಕೆ ಬಂಧನಕ್ಕೆ ಕಾರಣವಾದರೆ, ಅದರ ನಿಯಮಿತ ಬಳಕೆ ಮೋಕ್ಷಕ್ಕೆ ಕಾರಣವಾಗಬಹುದು..! ರೀಲ್ಸ್, ಟ್ರೋಲುಗಳ ಹೊರತಾದ ಜೀವನ ಮನುಷ್ಯನಿಗೆ ಶಾಂತಿ ನೀಡಬಹುದು. “ಜಂತೂನಾಂ ನರಜನ್ಮ ದುರ್ಲಭಮ್” ಅದೆಷ್ಟೋ ಜನ್ಮಗಳ ಪುಣ್ಯಗಳ ಫಲವಾಗಿ ನಮಗೆ ಮಾನವ ಜನ್ಮ ಸಿಕ್ಕಿದೆ. ಹಿಂದುತ್ವದ ಪ್ರಕಾರ ನಮ್ಮ ಜನ್ಮದ ಪರಮಲಕ್ಷ್ಯ ಮೋಕ್ಷ. ಮೋಕ್ಷ ಸಾಧನೆಗೆ ಭಗವದ್ಭಕ್ತಿ, ಭಗವದ್ ಚಿಂತನೆ ಅವಶ್ಯಕ. ಕಳೆದು ಹೋದ ಕ್ಷಣ, ಎಷ್ಟು ಕೋಟಿ ಕೊಟ್ಟರೂ ಸಿಗದು. ಲೌಕಿಕ ಚಿಂತನೆಯಲ್ಲಿ, ಪಾರಮಾರ್ಥಿಕ ಲಕ್ಷವನ್ನು ಮರೆಯುವುದು ಮೂರ್ಖತನ. ಹಾಗಾಗಿ ಸಾಮಾಜಿಕ ಜಾಲತಾಣಗಳ, ರೀಲ್ಸು, ಟ್ರೋಲುಗಳ ಹೊರತಾದ ಜೀವನವನ್ನು ನೋಡುವ ಪ್ರಾಮಾಣಿಕ ಪ್ರಯತ್ನ ಮಾಡೋಣ.

“ಲೋಕಾಃ ಸಮಸ್ತಾಃ ಸುಖಿನೋ ಭವಂತು”