Saturday, 9 June 2018

ಶ್ರೀ ಆದಿ ಶಂಕರಾಚಾರ್ಯರಿಂದ ರಚಿತವಾದ ಸುಂದರ ಸ್ತೋತ್ರಮಾಲೆ ಗುರ್ವಷ್ಟಕಮ್..

ಶರೀರಂ ಸುರೂಪಂ ತಥಾ ವಾ ಕಲತ್ರಂ
ಯಶಶ್ಚಾರು ಚಿತ್ರಂ ಧನಂ ಮೇರುತುಲ್ಯಂ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿ ಪದ್ಮೇ
ತತಃ ಕಿಮ್ ತತಃ ಕಿಮ್ ತತಃ ಕಿಮ್ ತತಃ ಕಿಮ್ ||1||
(ಮನುಷ್ಯನ ಶರೀರ ಸುಂದರವಾಗಿರಬಹುದು , ಆತನ ಪತ್ನಿಯೂ  ಸುಂದರಿಯಾಗಿರಬಹುದು , ಆತನ ಯಶಸ್ಸು ನಾಲ್ಕು ದಿಕ್ಕುಗಳಲ್ಲೂ ವ್ಯಾಪಿಸಿರಬಹುದು , ಸಂಪತ್ತು ಮೇರುಪರ್ವತದಷ್ಟಿರಬಹುದು ಆದರೂ ಆತನ ಮನಸ್ಸು ಗುರುಗಳ ಚರಣಾರವಿಂದಗಳಲ್ಲಿ ಆಸಕ್ತವಾಗಿರದಿದ್ದರೆ , ಈ ವಸ್ತುಗಳಿಂದೇನು ಪ್ರಯೋಜನ...?)


ಕಲತ್ರಂ ಧನಂ ಪುತ್ರಪೌತ್ರಾದಿ ಸರ್ವಂ
ಗೃಹಂ ಬಾಂಧವಾಃ ಸರ್ವಮೇತದ್ಧಿ ಜಾತಮ್ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿ ಪದ್ಮೇ
ತತಃ ಕಿಮ್ ತತಃ ಕಿಮ್ ತತಃ ಕಿಮ್ ತತಃ ಕಿಮ್ ||2||
(ಹೆಂಡತಿ , ಹಣ , ಮಕ್ಕಳು , ಮೊಮ್ಮಕ್ಕಳು , ಮನೆ , ನೆಂಟರು ಇವೆಲ್ಲವೂ ಇದ್ದರೂ , ಮನುಷ್ಯನ ಮನಸ್ಸು ಗುರುಗಳ ಚರಣದಲ್ಲಿ ಆಸಕ್ತವಾಗಿರದಿದ್ದರೆ  , ಇವುಗಳಿಂದೇನು ಪ್ರಯೋಜನ...?)


ಷಡಂಗಾದಿ ವೇದೋ ಮುಖೇ ಶಾಸ್ತ್ರವಿದ್ಯಾ
ಕವಿತ್ವಾದಿ ಗದ್ಯಂ ಸುಪದ್ಯಂ ಕರೋತಿ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿ ಪದ್ಮೇ
ತತಃ ಕಿಮ್ ತತಃ ಕಿಮ್ ತತಃ ಕಿಮ್ ತತಃ ಕಿಮ್ ||3||
(ಮನುಷ್ಯ ಷಡಂಗ , ಶಾಸ್ತ್ರಗಳನ್ನು ಕಂಠಸ್ಥ ಮಾಡಿರಲಿ , ರಮಣೀಯವಾಗಿ ಕಾವ್ಯವನ್ನು ರಚಿಸುವ ಸಾಮರ್ಥ್ಯವನ್ನೂ ಹೊಂದಿರಲಿ..ಆದರೂ ಮನುಷ್ಯನ ಮನಸ್ಸು ಗುರುಗಳ ಚರಣದಲ್ಲಿ ಆಸಕ್ತವಾಗಿರದಿದ್ದರೆ  , ಇವುಗಳಿಂದೇನು ಪ್ರಯೋಜನ...?)



ವಿದೇಶೇಷು ಮಾನ್ಯಃ ಸ್ವದೇಶೇಷು ಧನ್ಯಃ
ಸದಾಚಾರವೃತ್ತೇಷು ಮತ್ತೋ ನ ಚಾನ್ಯಃ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿ ಪದ್ಮೇ
ತತಃ ಕಿಮ್ ತತಃ ಕಿಮ್ ತತಃ ಕಿಮ್ ತತಃ ಕಿಮ್ ||4||
(ವಿದೇಶದಲ್ಲಿ ಯಾರು ಗೌರವಿಸಲ್ಪಡುತ್ತಾರೋ , ಸ್ವದೇಶದಲ್ಲಿ ಯಾರಿಗೆ ಜಯಕಾರ ಹಾಕುತ್ತಾರೋ , ಯಾರು ಸದಾಚಾರವನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೋ ಆದರೂ ಅಂತವರ ಮನಸ್ಸು ಗುರುಗಳ ಚರಣದಲ್ಲಿ ಆಸಕ್ತವಾಗಿರದಿದ್ದರೆ  , ಇವುಗಳಿಂದೇನು  ಪ್ರಯೋಜನ...?)



ಕ್ಷಮಾಮಂಡಲೇ ಭೂಪಭೂಪಾಲವೃಂದೈಃ
ಸದಾ ಸೇವಿತಂ ಯಸ್ಯ ಪಾದಾರವಿಂದಮ್ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿ ಪದ್ಮೇ
ತತಃ ಕಿಮ್ ತತಃ ಕಿಮ್ ತತಃ ಕಿಮ್ ತತಃ ಕಿಮ್ ||5||
(ಯಾರ ವಿದ್ವತ್ತಿಗೆ ತಾಲೆಬಾಗಿ ಭೂಮಿಯಲ್ಲಿರುವ ಸಕಲ ರಾಜರೂ ಅಂತಹ ಮಹಾನುಭಾವ  ವಿದ್ವಾಂಸನ ಚರಣಕಮಲಗಳನ್ನು ಪೂಜಿಸುತ್ತಾರೋ , ಅಂತಹ ವಿದ್ವಾಂಸನ ಮನಸ್ಸೂ ಗುರುಗಳ ಚರಣದಲ್ಲಿ ಆಸಕ್ತವಾಗಿರದಿದ್ದರೆ  , ಅವನಿಂದೇನು ಪ್ರಯೋಜನ...?)



ಯಶೋ ಮೇ ಗತಂ ದಿಕ್ಷು ದಾನಪ್ರಭಾವಾತ್
ಜಗದ್ವಸ್ತು ಸರ್ವಂ ಕರೇ ಸತ್ಪ್ರಸಾದಾತ್ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿ ಪದ್ಮೇ
ತತಃ ಕಿಮ್ ತತಃ ಕಿಮ್ ತತಃ ಕಿಮ್ ತತಃ ಕಿಮ್ ||6||
(ತಾನು ಮಾಡುವ ದಾನದಿಂದ ಕೀರ್ತಿ ಸರ್ವತ್ರ ವ್ಯಾಪಕವಾಗಿದ್ದರೂ , ಗುರುಗಳ ಸಹಜ ದೃಷ್ಠಿಯಿಂದ ಸಕಲೈಶ್ವರ್ಯಗಳು ಪ್ರಾಪ್ತವಾಗಿದ್ದರೂ , ಮನುಷ್ಯರ ಮನಸ್ಸು ಗುರುಗಳ ಚರಣದಲ್ಲಿ ಆಸಕ್ತವಾಗಿರದಿದ್ದರೆ  , ಇವುಗಳಿಂದೇನು ಪ್ರಯೋಜನ...?)


ನ ಭೋಗೇ ನ ಯೋಗೇ ನ ವಾ ವಾಜಿರಾಜೌ
ನ ಕಾಂತಾಸುಖೇ ನೈವ ವಿತ್ತೇಷು ಚಿತ್ತಂ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿ ಪದ್ಮೇ
ತತಃ ಕಿಮ್ ತತಃ ಕಿಮ್ ತತಃ ಕಿಮ್ ತತಃ ಕಿಮ್ ||7||
(ಯಾರ ಮನಸ್ಸು , ಭೋಗ , ಯೋಗ , ಅಶ್ವ , ರಾಜ್ಯ , ಧನದ ವಿಷಯಗಳಲ್ಲಿ ಚಂಚಲವಾಗದಿದ್ದರೂ ಅಂತಹ ಮನುಷ್ಯರ ಮನಸ್ಸೂ  ಗುರುಗಳ ಚರಣದಲ್ಲಿ ಆಸಕ್ತವಾಗಿರದಿದ್ದರೆ  , ಇವುಗಳಿಂದೇನು  ಪ್ರಯೋಜನ...?)



ಅರಣ್ಯೇ ನ ವಾ ಸ್ವಸ್ಯ ಗೇಹೇ ನ ಕಾರ್ಯೇ
ನ ದೇಹೇ ಮನೋ ವರ್ತತೇ ಮೇ ತ್ವನರ್ಘ್ಯೇ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿ ಪದ್ಮೇ
ತತಃ ಕಿಮ್ ತತಃ ಕಿಮ್ ತತಃ ಕಿಮ್ ತತಃ ಕಿಮ್ ||8||
(ಯಾವುದೇ ಮನುಷ್ಯನ ಮನಸ್ಸು ಅರಣ್ಯದಲ್ಲಾಗಿರಲಿ , ಮನೆಯಲ್ಲಾಗಿರಲಿ , ಕಾರ್ಯದಲ್ಲಾಗಿರಲಿ , ಸ್ವಶರೀರದಲ್ಲಾಗಿರಲಿ , ಅಮೂಲ್ಯವಾದಂತಹ ಸಂಪತ್ತಿನಲ್ಲಾಗಿರಲಿ ಚಂಚಲವಾಗಿರದಿದ್ದರೂ ಮನಸ್ಸು ಗುರುಗಳ ಚರಣದಲ್ಲಿ ಆಸಕ್ತವಾಗಿರದಿದ್ದರೆ  , ಇದರಿಂದೇನು ಪ್ರಯೋಜನ...?)


ಗುರೋರಷ್ಟಕಂ ಯಃ ಪಠೇತ್ ಪುಣ್ಯದೇಹೀ
ಯತಿರ್ಭೂಪತಿಬ್ರಹ್ಮಚಾರೀ ಚ ಗೇಹೀ |
ಲಭೇತ್ ವಾಂಛಿತಾರ್ಥ ಪದಂ ಬ್ರಹ್ಮಸಂಜ್ಞಮ್
ಗುರೋರುಕ್ತವಾಕ್ಯೇ ಮನೋ ಯಸ್ಯ ಲಗ್ನಮ್ ||9||
(ಸಂನ್ಯಾಸಿ , ರಾಜ , ಬ್ರಹ್ಮಚಾರಿ ಯಾರೇ ಈ ಗುರ್ವಷ್ಟಕವನ್ನು ಓದಿದರೂ ಅವರ  ಮನಸ್ಸಿನ ಆಸೆಗಳು ನೆರವೇರುತ್ತವೆ..ಅವರಿಗೆ ಬ್ರಹ್ಮಪದ ಸಿಗುತ್ತದೆ ಹಾಗೂ ಗುರುವಿನ ಆಜ್ಞೆಯನ್ನು ಶಿರಸಾ ಪಾಲಿಸುವವರಿಗೆ ಸನ್ಮಂಗಲವುಂಟಾಗುತ್ತದೆ.)

ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ..

ನಮ್ಮ ದೇಶದ ಸಂಸ್ಕೃತಿಯೇ ಅಂತದ್ದು, ವಿವಿಧತೆಯಲ್ಲಿ ಏಕತೆ ನಮ್ಮ ಧ್ಯೇಯ.ನಮ್ಮಲ್ಲಿರುವ
ಭಾಷೆಗಳೆಷ್ಟು..?ನಮ್ಮಲ್ಲಿರುವ ರಾಜ್ಯಗಳೆಷ್ಟು..?ನಮ್ಮಲ್ಲಿರುವ
ಧರ್ಮಗಳೆಷ್ಟು..?ನಮ್ಮಲ್ಲಿರುವ ಸಂಸ್ಕೃತಿಗಳೆಷ್ಟು..? ಇಂದಿಗೂ ಭಾರತವೆಂದರೆ ಇಡೀ
ಜಗತ್ತೇ ನಿಬ್ಬೆರಗಾಗಿ ನೋಡುತ್ತದೆ.ಒಂದು ಭಾಷೆ , ಸಂಸ್ಕೃತಿ , ಧರ್ಮವನ್ನಿಟ್ಟುಕೊಂಡೆ
ಸರಿಯಾಗಿ ಬಾಳಲಾಗದ ರಾಷ್ಟ್ರಗಳು ನಮ್ಮ ದೇಶದ ಸಾಮರಸ್ಯವನ್ನು ನೋಡಿ
ಅಚ್ಚರಿಗೊಳ್ಳುತ್ತಿವೆ. ಹೌದು, ನಮ್ಮದು Incredible India.    .

ನಮ್ಮಲ್ಲಿ ಹಲವು ಪಕ್ಷಗಳಿರಬಹುದು , ಹಲವು ಪಂಥಗಳಿರಬಹುದು , ಹಲವು
ಧರ್ಮಗಳಿರಬಹುದು..ಆದರೆ ಮನದಲ್ಲಿರಬೇಕಾದ ಭಾವನೆಯೊಂದೇ, ಅದು ಭಾರತ, ಜನ್ಮಭೂಮಿಯ
ಭಕ್ತಿ, ನಾವೆಲ್ಲರೂ ಭಾರತೀಯರೆಂಬ ಸದ್ಭಾವನೆ.

ಪಕ್ಷಾತೀತರಾಗಿ , ಧರ್ಮಾತೀತರಾಗಿ , ಪಂಥಾತೀತರಾಗಿ ದೇಶಸೇವೆ ಮಾಡುವುದು ಪ್ರತಿಯೊಬ್ಬ
ಭಾರತೀಯನ ಕರ್ತವ್ಯ..ಈ ದೇಶದಲ್ಲಿ ನಾವೇನು ಅನುಭವಿಸಿಲ್ಲ..?ಇಲ್ಲಿ
ಜನ್ಮವೆತ್ತಿದ್ದೇವೆ..ಇಲ್ಲಿನ ನೀರನ್ನು ಕುಡಿಯುತ್ತಿದ್ದೇವೆ..ಇಲ್ಲಿನ ಗಾಳಿಯನ್ನು
ಉಸಿರಾಡುತ್ತಿದ್ದೇವೆ..ಪ್ರತಿಯೊಂದು ಸವಲತ್ತುಗಳನ್ನು ಪಡೆದಿದ್ದೇವೆ..ಮುಖ್ಯವಾಗಿ
ಯಾರಿಗೂ ತಲೆಬಾಗದೇ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ.


ಪ್ರಪಂಚದ ಯಾವುದೇ ದೇಶಕ್ಕೆ ಹೋಗಿ..ಮಾತೃಭೂಮಿಯಲ್ಲಿ ಸಿಗುವಷ್ಟು ಗೌರವ ನಿಮಗೆ
ಸಿಗುವುದಿಲ್ಲ..ಯಾವುದೋ ಒಂದು ಪರಕೀಯ ಭಾವನೆ ನಿಮ್ಮನ್ನು ಕಾಡುತ್ತಲೇ
ಇರುತ್ತದೆ..ಕೆಲವೊಂದು ದೇಶಗಳಲ್ಲಿ ಅನ್ಯಾಯವಾದಾಗ ಪ್ರತಿಭಟಿಸುವ
ಹಕ್ಕಿಲ್ಲ..ನಿರಾತಂಕವಾಗಿ ಓಡಾಡುವ ಹಾಗಿಲ್ಲ..ನೆಮ್ಮದಿಯಾಗಿ ಜೀವಿಸುವಂತಿಲ್ಲ.ಅಲ್ಲಿನ
ವ್ಯವಸ್ಥೆಯ ಬಗ್ಗೆ ಮಾತನಾಡುವಂತಿಲ್ಲ.

ಆದರೆ ನಮ್ಮಲ್ಲಿ ಪ್ರತಿಯೊಬ್ಬ ಪ್ರಜೆಗೂ ಸ್ವಾತಂತ್ರ್ಯವಿದೆ...ಅನ್ಯಾಯವಾದಾಗ
ಪ್ರತಿಭಟಿಸುವ ಹಕ್ಕಿದೆ..ಹಾಗೇ ಮೂಲಭೂತ ಕರ್ತವ್ಯಗಳೂ ಇವೆ..ಭಾರತವಾಸಿಗಳಾದ ನಾವು
ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕಾದ್ದು ಅತ್ಯಗತ್ಯ..ದೇಶಸೇವೆ ಯಾವುದೇ ಪಕ್ಷಕ್ಕೆ
ಸೀಮಿತವಲ್ಲ..ಯಾವುದೇ ಸಂಘ-ಪರಿವಾರದ ಕರ್ತವ್ಯವಲ್ಲ..ಯಾವುದೇ ನಾಯಕನ ಸ್ವತ್ತಲ್ಲ.

ದೇಶಸೇವೆ ಪ್ರತಿಯೊಬ್ಬ ಭಾರತೀಯನ ನಾಡಿಮಿಡಿತ..ಜನ್ಮಭೂಮಿಯ ಹಿತಕ್ಕಿರಲಿ ಮನದ
ತುಡಿತ..ನಾವೆಲ್ಲರೂ ಭಾರತೀಯರು.ಭಾರತಮಾತೆ ನಮ್ಮೆಲ್ಲರ ತಾಯಿ..ಅವಳ ಮಕ್ಕಳು
ನಾವು..ಮನೆಮಕ್ಕಳು ಕಾದಾಡುವುದನ್ನು ಬಿಟ್ಟು ಮನೆಯೊಳಿತಿಗಾಗಿ ಶ್ರಮಿಸಿದರಾಗದೇ...?