Thursday, 16 May 2024

ಮಾನವ ಜನ್ಮ ದೊಡ್ಡದು...

ಬದುಕಿನ ಕೆಲವು ಕಟು ಸತ್ಯಗಳನ್ನು ಮರೆತು ವರ್ತಮಾನದ ಕ್ಷಣಗಳನ್ನು ಅನುಭವಿಸುತ್ತೇವೆ. ಆದರೆ ವರ್ತಮಾನದ ನೆನಪಲ್ಲಿ ಭವಿಷ್ಯವನ್ನು, ಬದುಕಿನ ಉದ್ದೇಶವನ್ನು ಮರೆಯುವುದು ಮೂರ್ಖತನ. “ಜಂತೂನಾಂ ನರಜನ್ಮ ದುರ್ಲಭಮ್” ನಮ್ಮ ನಂಬಿಕೆಯ ಪ್ರಕಾರ ಹಲವಾರು ಜನ್ಮಗಳ ಪುಣ್ಯದ ಫಲದಿಂದ ಈ ಮನುಷ್ಯ ಜನ್ಮ ಸಿಕ್ಕಿದೆ. ಮನುಷ್ಯ ಜನ್ಮದ ಉದ್ದೇಶ ಕೇವಲ ಮಜಾ, ಮಸ್ತಿ ಆಗಿರಬಾರದು. “ಮಾನವ ಜನ್ಮ ದೊಡ್ಡದು ಅದ ಹಾಳ ಮಾಡಿಕೊಳ್ಳದಿರಿ ಹುಚ್ಚಪ್ಪಗಳಿರಾ” ಎಂಬ ದಾಸವಾಣಿ ಪ್ರಸ್ತುತ. ಆಹಾರ, ನಿದ್ರೆ, ಭಯ, ಮೈಥುನಗಳಲ್ಲಿ ಮನುಷ್ಯ ಎಲ್ಲಾ ಪ್ರಾಣಿಗಳಿಗೂ ಸರಿಸಮಾನ. ಆದರೆ ಮನುಷ್ಯ ಎಲ್ಲ ಪ್ರಾಣಿಗಳಿಗಿಂತಲೂ ಶ್ರೇಷ್ಟ . ಏಕೆಂದರೆ “ಜ್ಞಾನಂ ತು ತೇಷಾಮಧಿಕೋ ವಿಶೇಷಃ” ಮನುಷ್ಯನಲ್ಲಿರುವ ಜ್ಞಾನಶಕ್ತಿಯಿಂದ ಆತ ಎಲ್ಲಾ ಪ್ರಾಣಿಗಳಿಗಿಂತಲೂ ಮಿಗಿಲು. ಆದರೆ ಆ ಜ್ಞಾನ ಶಕ್ತಿಯನ್ನು ಮರೆತು ಮನುಷ್ಯ ಮೃಗಗಳಂತೇ ಆಹಾರ, ನಿದ್ರೆ, ಭಯ, ಮೈಥುನದಲ್ಲೇ ವ್ಯಸ್ತನಾದರೆ, ಮನುಷ್ಯ ಜನ್ಮಕ್ಕೇನು ಫಲ...?

ವರ್ತಮಾನದ ಪರಿಸ್ಥಿತಿ ಹೀಗೆ ಸಾಗುತ್ತಿದೆ. ಹುಟ್ಟಿದ ಮಗುವಿಗೆ ಸಂಸ್ಕಾರ ಕಲಿಸಲು, ಮಗುವಿನ ಜೊತೆ ಸಮಯ ಕಳೆಯಲು ಪೋಷಕರಿಗೆ ಪುರುಸೊತ್ತಿಲ್ಲ. “ವರ್ಕಿಂಗ್ ಪೇರೆಂಟ್” ಎಂಬ ಹಣೆಬರಹ. ಮಗುವಿನ ಜೊತೆ ಸಮಯ ಕಳೆಯಲಾರದ ಪೋಷಕರಿಗೆ ಜೀವನದಲ್ಲಿ ಹಣ ಮಾಡುವ ಚಪಲ. ಅಂಬೆಗಾಲಿಕ್ಕುವ ಮೊದಲೇ ಮಗುವನ್ನು ಡೇ ಕೇರಿಗೆ ಸೇರುಸುವ ತರಾತುರಿ. ಅಲ್ಲಿಗೆ ಮಕ್ಕಳಿಗೆ ಸಿಗುವ ಪೋಷಕರ ಪ್ರೀತಿ, ಮಕ್ಕಳ ಅಮೂಲ್ಯ ಬಾಲ್ಯಜೀವನ ಖತಮ್..!! ಮಹಾಭಾರತ, ರಾಮಾಯಣ, ಪಂಚತಂತ್ರದ ಬದಲು “ಜಾನಿ ಜಾನಿ ಯೆಸ್ ಪಾಪಾ” ಶುರು..! ಎಲ್ಲವನ್ನೂ ಮಾಡುವುದು ಮಕ್ಕಳಿಗಾಗಿ, ಹೋಗುವಾಗ ಗಂಟು ತೆಗೆದುಕೊಂಡು ಹೋಗುತ್ತೇವಾ ? ಎಂಬ ಭಾಷಣ ಬೇರೆ. ಅಲ್ಲ, ಮಕ್ಕಳೇನು ಗಂಟು ಮಾಡಿಡಿ ಎಂದು ಕೇಳಿದ್ದವಾ..? ಅವರ ಅಮೂಲ್ಯ ಬಾಲ್ಯದ ಕ್ಷಣಗಳನ್ನೇ ಹಾಳು ಮಾಡಿದ ಮೇಲೆ ಯಾವ ಗಂಟಿಗೇನು ಫಲ...?

ಸ್ವಲ್ಪ ಸಮಯದ ನಂತರ ಯಾವ ಸ್ಕೂಲ್ ಎಂಬ ಹುಡುಕಾಟ. ಗೂಗಲ್ಲಿನಲ್ಲಿ ೫ ಸ್ಟಾರ್ ಇರುವ, ಇಂಗ್ಲೀಷ್ ಮೀಡಿಯಮ್ ಸ್ಕೂಲೇ ಆಗಬೇಕು. ಅಲ್ಲೇನು ಭಾರತೀಯ ಸಂಸ್ಕೃತಿ ಲೆಕ್ಕಾಚಾರಕ್ಕಿಲ್ಲ ಆಧುನಿಕತೆಯ ಶಿಕ್ಷಣ. ಮಾತೆತ್ತಿದರೆ ಇಂಗ್ಲೀಷಿನಲ್ಲಿ ಟುಸ್ ಪುಸ್..! ಭಾರತೀಯ ಸಂಸ್ಕೃತಿಯ ಶಿಕ್ಷಣವಿಲ್ಲ, ಸಂಸ್ಕೃತವಿಲ್ಲ, ಯೋಗ, ಶಾಸ್ತ್ರಗಳಿಲ್ಲ. ಶಿಕ್ಷಣದ ಉದ್ದೇಶ ಒಂದೇ, ದೊಡ್ಡ ನೌಕರಿಗೆ ಹೋಗುವುದು, ಹಣ ಸಂಪಾದಿಸುವುದು, ಐಷಾರಾಮಿ ಜೀವನ ಸಾಗಿಸುವುದು..!!

ಅಂತೂ ನೌಕರಿಗೂ ಸೇರಾಯಿತು, ಇಲ್ಲಾದರೂ ಮಾನವ ಜೀವನದ ಲಕ್ಷ್ಯ ನೆನಪಿಗೆ ಬಂದೀತೆ...? ಖಂಡಿತ ಇಲ್ಲ. ಟಾರ್ಗೆಟ್ಟುಗಳು, ಮೀಟಿಂಗುಗಳು, ಪ್ರಮೋಷನ್ನುಗಳು, ಅದೂ ಬೇರೆಯದೇ ಲೋಕ..!! ಆಧುನಿಕ ಜೀವನದಲ್ಲಿ ಬಾಲ್ಯ ಹಾಳಾಯಿತು, ಶಿಕ್ಷಣ ಹಳಿ ತಪ್ಪಿತು, ಯೌವನ ಬರಿದಾಯಿತು. ಇನ್ನೇನು ಎಲ್ಲವೂ ಮುಗಿಯಿತು ಎನ್ನುವದರಲ್ಲಿ ಹಲವರಿಗೆ “ಜೀವನದಲ್ಲಿ ಎನೋ ಮಿಸ್ಸಾಗಿದೆ” ಎಂಬ ಅರಿವಾಗುತ್ತದೆ. ಅದರ ಅನ್ವೇಷಣೆ ನಡೆಯುತ್ತದೆ..! ಅಲ್ಲಿಗೆ ಜೀವನದ ಮುಕ್ಕಾಲು ಪರ್ಸೆಂಟ್ ಆಯುಷ್ಯ ಬರಿದಾಗಿರುತ್ತದೆ.

ಜೀವನವೆಂದರೆ ಕೇವಲ ಹಣ ಮಾಡುವುದಲ್ಲ. ನಮ್ಮನ್ನು ನಾವು ಅರಿಯುವ ಪ್ರಯತ್ನ. ಅಜ್ಞಾನದಿಂದ ಬೆಳಕಿನ ಕಡೆ ಸಾಗುವ ಪ್ರಯತ್ನ. ನಮ್ಮಲ್ಲಿರುವ “ನಾನು” ಎಂಬ ಅದಮ್ಯ ಭಾವನೆಯಿಂದ “ನನ್ನದೇನೂ ಇಲ್ಲ” ಎಂಬುದರ ಕಡೆ ಸಾಗುವ ಪ್ರಯತ್ನ. ಆತ್ಮತತ್ವಜ್ಞಾನವನ್ನು ಅರಿಯುವ ಪ್ರಯತ್ನ. ಈ ಯಾವ ಪ್ರಯತ್ನಗಳನ್ನೂ ಸಾಧಿಸದೇ ಕೇವಲ ಸಂಸಾರ ತಾಪತ್ರಯದಲ್ಲೇ ಮುಳುಗಿದರೆ ಬದುಕಿನ ಉದ್ದೇಶ ಹೇಗೆ ನೆರವೇರಬಹುದು..?

“ವೃದ್ಧೋ ಯಾತಿ ಗೃಹೀತ್ವಾ ದಂಡಂ ತದಪಿ ನ ಮುಂಚತ್ಯಾಶಾ ಪಿಂಡಮ್” ವಯಸ್ಸಾಗಿ ಕೋಲು ಹಿಡಿದು ನಡೆಯುತ್ತಿದ್ದರೂ ಆಸೆಯೆಂಬ ಪಿಂಡ ಮನುಷ್ಯನನ್ನು ಬಿಡುವುದಿಲ್ಲವಂತೆ. ಅದಕ್ಕೆ ಅನೇಕ ರಾಜಕಾರಣಿಗಳು ಸಾಕ್ಷಿ. ಕರ್ತವ್ಯ ಕರ್ಮಗಳನ್ನು ಮರೆಯಬಾರದೆಂದು ಭಗವಂತನೇ ಗೀತೆಯಲ್ಲಿ ಹೇಳಿದ್ದಾನೆ. ಆದರೆ ಕರ್ಮಗಳನ್ನೇ ಸದಾ ಕರ್ತವ್ಯಗಳನ್ನಾಗಿ ಮಾಡಿಕೊಂಡರೆ, ವೈರಾಗ್ಯ ಬರುವುದು ಯಾವಾಗ ? ಹಿಂದಿನ ಕಾಲದಲ್ಲಿ ಮಕ್ಕಳನ್ನು ಅಧಿಕಾರಕ್ಕೆ ನಿಯೋಜಿಸಿ ವಯಸ್ಸಾದ ರಾಜರು ವಾನಪ್ರಸ್ಥಾಶ್ರಮಕ್ಕೆ ತೆರಳುತ್ತಿದ್ದರು. ಈಗಿನವರಲ್ಲಿ ವಯಸ್ಸಾದರೂ ಅಧಿಕಾರದ ವ್ಯಾಮೋಹ ಕಡಿಮೆಯಗುತ್ತಿಲ್ಲವಲ್ಲ, ಕಲಿಯುಗದ ಪ್ರಭಾವವೂ ಇರಬಹುದು. 

ಆಧುನಿಕತೆಯ ಹೆಸರಲ್ಲಿ ಜೀವನದ ಉದ್ದೇಶ ಮರೆಯುವುದು ಮೂರ್ಖತನ. ಬದುಕೆಂದರೆ ಸುದೀರ್ಘವಲ್ಲ, ನಾಳೆಯ ಭರವಸೆಯಿಲ್ಲ. ನಾನು, ನನ್ನದು ಎಂದು ಮೆರೆದ ಅದೆಷ್ಟೋ ಜನ ಕಾಲದ ಹೊಡೆತಕ್ಕೆ ಮಣ್ಣಾಗಿ ಹೇಳ ಹೆಸರಿಲ್ಲದೇ ಹೋದರು. ಆಸೆಯ ಮತ್ತು ಹೆಚ್ಚಾದರೆ, ಸ್ಮಶಾನಕ್ಕೆ ಸಾಗುವ ಹೆಣಗಳನ್ನೊಮ್ಮೆ ನೋಡಬೇಕು. ಭವಿಷ್ಯದಲ್ಲಿ ನನ್ನ ಪರಿಸ್ಥಿತಿಯೂ ಅದೇ ಎಂದು ನೆನಪಿಟ್ಟುಕೊಳ್ಳಬೇಕು. ಈ ಪ್ರಪಂಚದಲ್ಲಿ ಎಲ್ಲವೂ ಅಸ್ಥಿರ ಎಂಬ ಭಾವನೆ ಮೂಡಬೇಕು. ಸದಾ ಭಗವಂತನ ನಾಮ ಸ್ಮರಣೆ, ಧರ್ಮಾಚರಣೆ ಮಾನವ ಜೀವನದ ಉದ್ದೇಶವೆಂದು ಅರಿಯಬೇಕು. “ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ” ಎಂಬ ನೀತಿ ಅನುಸರಿಸಬೇಕು. ಆಗಲೇ ಮನುಷ್ಯ ಜೀವನ, ಪ್ರಾಣಿಗಳ ಜೀವನಕ್ಕಿಂತಲೂ ವಿಭಿನ್ನವೆಂಬುದು ಸತ್ಯವಾದೀತು.


“ಲೋಕಾಃ ಸಮಸ್ತಾಃ ಸುಖಿನೋ ಭವಂತು”

 

No comments:

Post a Comment