Thursday, 16 February 2017

ದಾರಿ ಯಾವುದಯ್ಯಾ ಸ್ವರ್ಗಕ್ಕೆ...?



ಒಮ್ಮೆ ಯಮದೂತ ಒಬ್ಬ ವ್ಯಕ್ತಿಯ ಆತ್ಮವನ್ನು ಯಮರಾಜನಲ್ಲಿಗೆ ಒಯ್ದು ಕೇಳಿದ- "ಹೇ ರಾಜ ! ಈ ವ್ಯಕ್ತಿ ಒಬ್ಬ ಮಹಾತ್ಮನಾಗಿದ್ದ. ತಾರುಣ್ಯದಲ್ಲಿ ತನ್ನ ತಂದೆ-ತಾಯಿ,ಪತ್ನಿ-ಮಕ್ಕಳನ್ನು ತೊರೆದು ಅರಣ್ಯಕ್ಕೆ ಹೋಗಿ ತಪಸ್ಸನ್ನಾಚರಿಸಿದ. ಸಂಸಾರದಿಂದ ವಿಮುಕ್ತನಾಗಿ ಸಂಪೂರ್ಣ ಜೀವನವನ್ನು ಆಧ್ಯಾತ್ಮದಲ್ಲೇ ಕಳೆದ. ಇಂತಹ ಧರ್ಮಪರಾಯಣನನ್ನು ಸ್ವರ್ಗಕ್ಕೆ ಕಳುಹಿಸಲೇ..?"

ಆಗ ಯಮರಾಜ ಮುಗುಳ್ನಗುತ್ತಾ " ಸ್ವಕರ್ತವ್ಯವನ್ನು ತ್ಯಾಗ ಮಾಡಿದ ಮನುಷ್ಯ ಎಂದಿಗೂ ಧರ್ಮಾತ್ಮನಾಗಲಾರ. ಆತನಿಗೆಂದೂ ಸ್ವರ್ಗಪ್ರಾಪ್ತಿಯಾಗದು. ಆತನನ್ನು ಪುನಃ ಭುವಿಗೆ ಕಳುಹಿಸು. ಸ್ವಕರ್ತವ್ಯದ ಜೊತೆಗೆ ಧರ್ಮಾಚರಣೆಯನ್ನು ಮಾಡಿಕೊಂಡು ಬರಲಿ" ಎಂದ.

ಯಮದೂತ ಮತ್ತೊಬ್ಬ ವ್ಯಕ್ತಿಯ ಆತ್ಮವನ್ನು ತಂದು " ಈ ವ್ಯಕ್ತಿ ಬಹಳ ಕರ್ತವ್ಯಪರಾಯಣನಾಗಿದ್ದ. ಸ್ವಕರ್ತವ್ಯವೇ ಜೀವನವೆಂದು ತಿಳಿದಿದ್ದ. ಈತನ ಪತ್ನಿ ಅನಾರೋಗ್ಯದಿಂದ ಸತ್ತರೂ ದುಃಖಿಸದೇ ಕರ್ತವ್ಯಪಾಲನೆಯಲ್ಲೇ ನಿರತನಾಗಿದ್ದ. ಈತನನ್ನಾದರೂ ಸ್ವರ್ಗಕ್ಕೆ ಕಳುಹಿಸಲೇ..? ಎಂದು ಕೇಳಿದ. 

ಆಗ ಯಮರಾಜ "ಇಂತಹ ಹೃದಯಹೀನ ವ್ಯಕ್ತಿಗೆ ಸ್ವರ್ಗದಲ್ಲೇನು ಕೆಲಸ..? ಪ್ರೇಮಭಾವನೆಯ ಮೂಲಕ ಮಾಡಿದ ಕರ್ತವ್ಯ ಪ್ರಶಂಸನೀಯವಾಗಿರುತ್ತದೆ. ಭಾವನೆಯೇ ಇಲ್ಲದೇ ಮಾಡಿದ ಕರ್ತವ್ಯ ವ್ಯರ್ಥವೆನಿಸುತ್ತದೆ. ಈತನಿಗೂ ಸ್ವರ್ಗಪ್ರಾಪ್ತಿಯಾಗಲಾರದು. ಪುನಃ ಭೂಮಿಗೆ ಕಳುಹಿಸು. ಭಾವನೆಗಳ ಮೂಲಕ ಕರ್ತವ್ಯಗಳನ್ನಾಚರಿಸುವಂತೇ ಪ್ರೇರೇಪಿಸು" ಎಂದು ದೂತನಿಗೆ ಹೇಳಿದ.

ಯಮದೂತ ಇನ್ನೊಬ್ಬ ವ್ಯಕ್ತಿಯ ಆತ್ಮವನ್ನು ತಂದು " ದೊರೆ ! ಈತ ಒಬ್ಬ ಸಾಮಾನ್ಯ ಗೃಹಸ್ಥ. ತನ್ನ ಜೀವಿತದುದ್ದಕ್ಕೂ ಪರಮ ಆಸ್ತಿಕನಾಗಿದ್ದ. ಪಾಪಕಾರ್ಯಗಳನ್ನು ಮಾಡದೇ ಜೀವನವನ್ನು ಸವೆಸಿದ. ತನ್ನ ಪರಿವಾರದವರನ್ನು,ಅನ್ಯರನ್ನು ಪ್ರೇಮಪೂರ್ವಕವಾಗಿ ಕಂಡ. ಸದಾ ಅನ್ಯರ ಒಳಿತನ್ನೇ ಬಯಸಿದ. ಅನ್ಯರ ಏಳ್ಗೆಗೆ ಶ್ರಮಿಸಿದ. ಈತನನ್ನಾದರೂ ಸ್ವರ್ಗಕ್ಕೆ ಕಳುಹಿಸಲೇ..?" ಎಂದು ಕೋರಿಕೊಂಡ.

ಯಮರಾಜನ ಸಂತಸಕ್ಕೆ ಪಾರವಿರಲಿಲ್ಲ. "ದೂತ..! ಈ ಸ್ವರ್ಗಲೋಕ ಇಂತವರಿಗಾಗಿಯೇ ಇದ್ದಿದ್ದು. ಈತನನ್ನು ಆದರಪೂರ್ವಕವಾಗಿ ಸ್ವರ್ಗಕ್ಕೆ ಕಳುಹಿಸು ಹಾಗೂ ಈತ ಆನಂದದಿಂದಿರಲು ಸರ್ವವ್ಯವಸ್ಥೆಯನ್ನೂ ಮಾಡು" ಎಂದು ಯಮದೂತನಿಗೆ ಹೇಳಿದ. 

ಯಾರು ಪಾಪಕರ್ಮಗಳಿಂದ ದೂರವಿರುತ್ತಾರೋ,ಯಾರು ಸರ್ವಪ್ರಾಣಿಗಳನ್ನು ಆದರದಿಂದ ಕಾಣುತ್ತಾರೋ,ಯಾರು ಸರ್ವಜಂತುಗಳಲ್ಲೂ ಪ್ರೇಮಭಾವನೆಯನ್ನು ಹೊಂದಿರುತ್ತಾರೋ,ಯಾರು ಕರ್ತವ್ಯನಿಷ್ಠರಾಗಿರುತ್ತಾರೋ ಅಂತವರು ಸ್ವರ್ಗೀಯ ಆನಂದದ ಅಧಿಕಾರಿಗಳಾಗಿರುತ್ತಾರೆ.

"ಸರ್ವೇ ಭವಂತು ಸುಖಿನಃ"

No comments:

Post a Comment