ಒಮ್ಮೆ ಚಂದ್ರಶೇಖರ ಆಜಾದ್,ಭಗತ್ ಸಿಂಗ್, ರಾಜಗುರು,ಸುಖದೇವ್ ಹಾಗೂ ಬಟುಕೇಶ್ವರದತ್ತರಂತಹ ಕ್ರಾಂತಿಕಾರಿಗಳ ಗುಂಪು ಇಲಾಹಾಬಾದಿನಲ್ಲಿ ತಂಗಿತ್ತು. ಆಜಾದರನ್ನು ಎಲ್ಲರೂ ಪಂಡಿತ್ ಜೀ ಎಂದೇ ಕರೆಯುತ್ತಿದ್ದರು. ಪಂಡಿತ್ ಜೀ ಎಂದರೆ ಕ್ರಾಂತಿಕಾರಿಗಳೆಲ್ಲರಿಗೂ ವಿಶೇಷವಾದ ಗೌರವವಿತ್ತು.
ಒಮ್ಮೆ ಸುಖದೇವ್ ಒಂದು ಕ್ಯಾಲೆಂಡರನ್ನು ತಂದ. ಆ ಕ್ಯಾಲೆಂಡರಿನಲ್ಲಿ ಒಂದು ಚಿತ್ರನಟಿಯ ಭಾವಚಿತ್ರವಿತ್ತು. ಸುಖದೇವ ಆ ಕ್ಯಾಲೆಂಡರನ್ನು ಕೋಣೆಯಲ್ಲಿದ್ದ ಮೊಳೆಗೆ ನೇತುಹಾಕಿ,ಯಾವುದೋ ಕೆಲಸದ ನಿಮಿತ್ತ ಹೊರಹೋದ. ಸ್ವಲ್ಪ ಸಮಯದ ನಂತರ ಪಂಡಿತ್ ಜೀ ಆ ಕೊಠಡಿಗೆ ಬಂದರು. ನೇತುಹಾಕಿದ್ದ ಕ್ಯಾಲೆಂಡರನ್ನು ನೋಡಿ ಆಕ್ರೋಶಗೊಂಡರು. ಕ್ಯಾಲೆಂಡರನ್ನು ಹರಿದು ಬೀಸಾಡಿದರು. ಸ್ವಲ್ಪ ಸಮಯದ ಬಳಿಕ ಸುಖದೇವ್ ಬಂದ. ಕೋಣೆಯಲ್ಲಿ ಕ್ಯಾಲೆಂಡರ್ ಇರಲಿಲ್ಲ. ಹರಿದು ಬೀಸಾಡಿದ ಕ್ಯಾಲೆಂಡರಿನ ಅವಶೇಷಗಳನ್ನು ಕಂಡ. ಸುಖದೇವನೂ ಮುಂಗೋಪಿ. ಕೋಪದಲ್ಲಿ ಅಲ್ಲಿರುವವರನ್ನೆಲ್ಲಾ ಬೈಯ್ದ.
"ಈ ಕ್ಯಾಲೆಂಡರನ್ನು ಹರಿದು ಬೀಸಾಕಿದವರು ಯಾರೆಂದು ಹೇಳಿ..?" ಕೋಪದಿಂದ ಕೇಳಿದ.
"ಅದನ್ನು ಹರಿದಿದ್ದು ನಾನೇ ಸುಖದೇವ್" ಪಂಡಿತ್ ಜಿ ಮೆಲ್ಲಗೆ ಉತ್ತರಿಸುತ್ತಾರೆ.
"ಪಂಡಿತ್ ಜೀ ಅದನ್ನೇಕೆ ಹರಿದು ಹಾಕಿದಿರಿ..? ಬಹಳ ಚೆನ್ನಾಗಿತ್ತು" ಸುಖದೇವನ ಪ್ರಶ್ನೆ.
"ಈ ಕ್ಯಾಲೆಂಡರಿನಿಂದ ನಮಗೇನು ಉಪಯೋಗ ಸುಖದೇವ್? ನಮ್ಮ ಉದ್ದೇಶ ಆಜಾದಿ. ಅದಕ್ಕೆ ಬೇಕಾದ್ದು ಏಕಾಗ್ರತೆ ಹಾಗೂ ಬಲಿದಾನ. ನಮ್ಮ ಏಕಾಗ್ರತೆಗೆ ಭಂಗ ತರುವಂತಹ ಯಾವ ಆಕರ್ಷಣೆಯೂ ನನಗಿಷ್ಟವಾಗುವುದಿಲ್ಲ. ಹಾಗಾಗಿ ಆ ಕ್ಯಾಲೆಂಡರನ್ನು ಹರಿದು ಹಾಕಿದೆ" ಆಜಾದರ ಉತ್ತರ ಅರ್ಥಗರ್ಭಿತವಾಗಿತ್ತು.
ಸುಖದೇವ್ ಅರೆಗಳಿಗೆ ಸ್ತಬ್ಧನಾದ. ಪಂಡಿತಜಿಯ ಮಾತಿನ ಗೂಢಾರ್ಥದ ಅರಿವಾಯಿತು.
ಕ್ರಾಂತಿಕಾರಿಗಳಿಗೆ ಸ್ವಾರ್ಥಕ್ಕಿಂತ ದೇಶದ ಹಿತವೇ ಪ್ರಮುಖವಾಗಿತ್ತು. ಹಾಗಾಗಿ ಕಷ್ಟ-ಅವಮಾನಗಳನ್ನು ಸಹಿಸಿ, ತಮ್ಮ ಜೀವವನ್ನೇ ಬಲಿದಾನ ಮಾಡಿದರು. ದುರದೃಷ್ಟವೆಂದರೆ ಹುತಾತ್ಮರಾದರೇ ಹೊರತು ಮಹಾತ್ಮರಾಗಲಿಲ್ಲ...!!
No comments:
Post a Comment